New Ration Card Application : ಹೊಸ ಪಡಿತರ ಚೀಟಿಗಾಗಿ ಲಕ್ಷಾಂತರ ಜನ ಹಂಬಲಿಸತೊಡಗಿದ್ದಾರೆ. ಆದರೆ ಒಂದು ವರ್ಷದ ಹಿಂದೆ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ಪಡಿತರ ಚೀಟಿಗಳ ವಿತರಣೆ ಸ್ಥಗಿತಗೊಳಿಸಲಾಗಿತ್ತು. ವೆಬ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ವಿಭಾಗವನ್ನು ಲಾಕ್ ಮಾಡಲಾಗಿತ್ತು.
ಇದೀಗ ಮತ್ತೆ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಹೆಚ್ ಮುನಿಯಪ್ಪ (K H Muniyappa) ಅವರು ಈಚೆಗೆ ರೇಷನ್ ಕಾರ್ಡ್ ವಿತರಣೆಗೆ ಸಂಬ೦ಧಪಟ್ಟ ಹೊಸ ಅಪ್ಡೇಟ್ ನೀಡಿದ್ದು; ಇದೇ ಎಪ್ರಿಲ್ 1ರಿಂದ ಹೊಸ ಕಾರ್ಡ್ ವಿತರಿಸಲಾಗುವುದು ಎಂದಿದ್ದರು. ಈ ನಡುವೆ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಏಪ್ರಿಲ್ 1ರಿಂದ ನಿಜಕ್ಕೂ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ಸಿಗುತ್ತದಾ ಎಂಬ ಗೊಂದಲ ಶುರುವಾಗಿದೆ.
ಎಪಿಎಲ್, ಬಿಪಿಎಲ್ ಕಾರ್ಡ್ ವಿತರಣೆ
ಆದ್ಯತಾ (Priority Household -PHH) ಹಾಗೂ ಆದ್ಯತೇತರ ಪಡಿತರ (Non-Priority Household- NPHH) ಎರಡೂ ರೀತಿಯ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ, ಹೊಸ ಪಡಿತರ ಚೀಟಿ ವಿತರಿಸುವ ಬಗ್ಗೆ ಸಚಿವರು ಮಹತ್ವದ ಮಾಹಿತಿ ನೀಡಿದ್ದಾರೆ.
ಇಲ್ಲಿಯ ತನಕ ಒಟ್ಟು 57,000 ಹೊಸ ಕಾರ್ಡ್ ವಿತರಿಸಿದ್ದೇವೆ. ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ. ಆರೋಗ್ಯ ತುರ್ತು ಕಾರಣಕ್ಕೆ 744 ಜನರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದೇವೆ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಇದೇ ಮಾರ್ಚ್ 31ರ ಒಳಗೆ ಪರಿಶೀಲಿಸಿ ಅರ್ಹರಿಗೆ ಕಾರ್ಡ್ ವಿತರಿಸಲು ಮುಂದಾಗಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು?
ಹೊಸ ರೇಷನ್ ಕಾರ್ಡ್ ಪಡೆಯಲು ಸರ್ಕಾರ ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದೆ. ಕುಟುಂಬದ ಆದಾಯ ಮತ್ತು ಉದ್ಯೋಗದ ಆಧಾರದ ಮೇಲೆ ಕಾರ್ಡ್ ವಿತರಿಸಲಾಗುತ್ತದೆ. ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು? ಇಲ್ಲಿ ನೋಡೋಣ…
ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೆ 12,000 ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಈ ಮಿತಿಯನ್ನು 17,000 ರೂಪಾಯಿಗೆ ನಿಗದಿಪಡಿಸಲಾಗಿದೆ.
ಬಹುಮುಖ್ಯವಾಗಿ ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಸರ್ಕಾರಿ ನೌಕರಿಯಲ್ಲಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಸ್ವಾಯತ್ತ ಮಂಡಳಿಗಳು, ಸಂಸ್ಥೆಗಳ ಉದ್ಯೋಗಿಗಳಾಗಿರಬಾರದು. ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳಾಗಿರಬಾರದು. ಆಸ್ಪತ್ರೆಗಳಲ್ಲಿನ ವೈದ್ಯರು, ವಕೀಲರು ಮತ್ತು ಲೆಕ್ಕಪರಿಶೋಧಕರಾಗಿರಬಾರದು.
ಇದನ್ನೂ ಓದಿ: Karnataka Rain News 2024 : ಮಳೆಭಾಗ್ಯ ತಂದ ಮಾರ್ಚ್ ತಿಂಗಳು | ವಾರದಿಂದ ಈ ಜಿಲ್ಲೆಗಳಲ್ಲಿ ಮಳೆ ಸಂಭ್ರಮ
ಯಾವ ರೈತರು ಬಿಪಿಎಲ್ ಕಾರ್ಡ್ ಪಡೆಯಬಹುದು?
ಮೂರು ಹೆಕ್ಟೇರ್ ಅಂದರೆ 7.5 ಎಕರೆ ಭೂಮಿ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ನೌಕರರಿಗೂ ಕಾರ್ಡ್ ಸಿಗುವುದಿಲ್ಲ. ಜೀವನೋಪಾಯಕ್ಕೆ ಬಳಸುವ ಒಂದು ವಾಹನ ಹೊರತುಪಡಿಸಿ 100 ಸಿಸಿ ಅಧಿಕ ಸಿಸಿ ಇರುವ ವಾಹನ ಹೊಂದಿರಬಾರದು. ವಾಹನಗಳಿಗೆ ಸಂಬಂಧಿಸಿದಂತೆ, ವೈಯಕ್ತಿಕ ವಾಹನಗಳನ್ನು ಮಾತ್ರ ಪರಿಗಣಿಸಲಾಗುವುದು.
ಗುತ್ತಿಗೆದಾರರು, ಕಮಿಷನ್ ಏಜೆಂಟ್ಗಳು, ಎಪಿಎಂಸಿ ವ್ಯಾಪಾರಿಗಳಿಗೆ ಬಿಪಿಎಲ್ ಕಾರ್ಡ್ ಲಭ್ಯವಾಗುವುದಿಲ್ಲ. ತಿಂಗಳಿಗೆ 450 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವವರೂ ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲ. ಬಹು-ರಾಷ್ಟ್ರೀಯ ಕಂಪನಿಗಳು ಅಥವಾ ಕೈಗಾರಿಕೆಗಳ ಉದ್ಯೋಗಿಗಳಿಗೂ ಈ ಕಾರ್ಡ್ ಲಭ್ಯವಾಗುವುದಿಲ್ಲ.
ಹೊಸ ಕಾರ್ಡ್ ಗ್ಯಾರಂಟಿ ಯಾವಾಗ?
ಅನರ್ಹ ಫಲಾನುಭವಿಗಳ ಪತ್ತೆ ಮತ್ತು ವಿವಿಧ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ರೇಷನ್ ಕಾರ್ಡ್ ವಿತರಣೆ ಕಾರ್ಯವನ್ನು ಮುಂದೂಡುತ್ತ ಬರಲಾಗಿದೆ. ಇದೀಗ ಹೊಸ ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಇದೇ ಮಾರ್ಚ್ 31 ರೊಳಗೆ ಪರಿಶೀಲನೆ ನಡೆಸಿ, ಬರಲಿರುವ ಏಪ್ರಿಲ್ 1 ರಿಂದ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವರು ತಿಳಿಸಿದ್ದಾರೆ.
ಆಹಾರ ಇಲಾಖೆ, ಈ ತನಕ ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರಕ್ಕಾಗಲಿ ಅಥವಾ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ವಿತರಣೆಗಾಗಲಿ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಇದೀಗ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ವಿತರಿಸುವ ಭರವಸೆ ನೀಡಿದೆ. ಅರ್ಜಿದಾರರ ಕೈಗೆ ಯಾವಾಗ ಹೊಸ ರೇಷನ್ ಕಾರ್ಡ್ ಸಿಗುತ್ತದೋ ಕಾದು ನೋಡಬೇಕಿದೆ.
ರೇಷನ್ ಕಾರ್ಡ್ ಅರ್ಜಿ ಲಿಂಕ್ : https://ahara.kar.nic.in
ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ