Anywhere Registration : ಜನಸಾಮಾನ್ಯರಿಗೆ ಆಸ್ತಿ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ಕಲ್ಪಿಸಲು ಉದ್ದೇಶಿತ ‘ಎಲ್ಲಾದರೂ ನೋಂದಣಿ’ (ಎನಿವೇರ್ ರಿಜಿಸ್ಟ್ರೇಷನ್) ಸೌಲಭ್ಯವನ್ನು ಶೀಘ್ರವೇ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ರಾಜ್ಯಾದ್ಯಂತ
ಕಳೆದ 2011ರಲ್ಲಿಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಎನಿವೇರ್ ರಿಜಿಸ್ಟ್ರೇಷನ್’ (Anywhere Registration) ಸೌಲಭ್ಯ ಜಾರಿಗೊಳಿಸಲು ನೋಂದಣಿ ಕಾಯ್ದೆ 1908ರ ಕಲಂ (5) ಹಾಗೂ ಕಲಂ (6)ಅಡಿ ಅನುವು ಮಾಡಿಕೊಡಲಾಗಿತ್ತು. ಇಷ್ಟು ದಿನ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಸೇವೆಯನ್ನು ರಾಜ್ಯಾದ್ಯಂತ ಚಾಲ್ತಿಗೆ ತರಲು ಉದ್ದೇಶಿಸಲಾಗಿದೆ ಎಂದು ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಉಪನೋಂದಣಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಯೋಜನೆ ಯಶಸ್ವಿಯಾಗಿದೆ. ಬೆಂಗಳೂರು ನಗರದ ಜಿಲ್ಲಾ ಉಪನೋಂದಣಿ ಕಚೇರಿ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.
ಯಾವುದಾದರೂ ಕಚೇರಿಯಲ್ಲಿ ನೋಂದಣಿ ಮಾಡಬಹುದು
ಮುಂದಿನ ದಿನಗಳಲ್ಲಿ ‘ಎನಿವೇರ್ ನೋಂದಣಿ’ ವ್ಯವಸ್ಥೆಯಡಿ ಯಾವುದೇ ವ್ಯಕ್ತಿ ನೋಂದಣಿ ದಸ್ತಾವೇಜನ್ನು ಆಯಾ ಜಿಲ್ಲಾ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ (Sub Registrar Office) ನೋಂದಣಿ ಮಾಡಿಕೊಳ್ಳಬಹುದಾಗಿದೆ.
ದಸ್ತಾವೇಜುಗಳ ನೋಂದಣಿಯಲ್ಲಿ ಅನಗತ್ಯ ವಿಳಂಬವನ್ನು ತಡೆಗಟ್ಟಲು, ನೋಂದಣಿ ಪ್ರಕ್ರಿಯೆ ಸುಲಭಗೊಳಿಸಲು ಹಾಗೂ ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವುದು ಈ ಯೋಜನೆ ಉದ್ದೇಶವಾಗಿದೆ.
ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ
ಈ ಜಿಲ್ಲೆಗಳಿಗೆ ವಿಸ್ತರಣೆ
ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ಯಶಸ್ವಿಯಾಗಿರುವುದರಿಂದ ಇದೀಗ ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾರ್ಚ್ 14ರಿಂದ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 72 ಸಬ್ ರಿಜಿಸ್ಟ್ರಾರ್ ಕಚೇರಿಗಳು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ.
ದಸ್ತಾವೇಜು ನೋಂದಣಿಯಲ್ಲಿ ಪಾರದರ್ಶಕv ತರಲುೆ, ತ್ವರಿತ ಸೇವೆ ಒದಗಿಸಲು, ವಿಳಂಬ ಹಾಗೂ ಕಚೇರಿಗಳಲ್ಲಿ ಜನದಟ್ಟಣೆ ನಿಯಂತ್ರಣ ಮಾಡಲು ಈ ಯೋಜನೆ ಪರಿಣಾಮಕಾರಿಯಾಗಿದೆ. ಇದರಿಂದ ಜನರ ಸಮಯ ಉಳಿಯಲಿದೆ, ನೊಂದಣಿ ಕಚೇರಿಯ ಸಿಬ್ಬಂದಿ ಮೇಲಿನ ಒತ್ತಡವೂ ಕಡಿಮೆ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.