Karnataka Rain News 2024 : ರಣ ಬೇಸಿಗೆಯ ಬೆಂಕಿ ಬಿಸಿಲಿನ ಶಾಖಕ್ಕೆ ಕಂಗಾಲಾಗಿದ್ದ ಕರುನಾಡು ನಿಧಾನಕ್ಕೆ ಮಳೆಯ ಸಿಂಚನಕ್ಕೆ ತಂಪಾಗುವ ಲಕ್ಷಣಗಳು ಗೋಚರಿಸತೊಡಗಿವೆ. ಹೌದು, ಭಯಂಕರ ಬಿರು ಬೇಸಿಗೆ ಲಕ್ಷಣಗಳನ್ನು ಹುಟ್ಟು ಹಾಕಿದ್ದ ಮಾರ್ಚ್ ತಿಂಗಳು ಅಪರೂಪಕ್ಕೆ ಮಳೆ ಸಿಂಚನ ಮಾಡಿದೆ.
ಪ್ರತೀ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆಯ ತಾಪ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ಮಾರ್ಚ್ ತಿಂಗಳಲ್ಲಿಯೇ ಮಿತಿ ಮೀರಿದ ಉಷ್ಣಾಂಶ ದಾಖಲಾಗಿ ‘ಉಷ್ಣ ಅಲೆ’ ಎದುರಾಗುವ ಮುನ್ಸೂಚನೆ ಕಂಡು ಬಂದಿತ್ತು. ಆದರೆ, ಇದೀಗ ಮಾರ್ಚ್ ತಿಂಗಳಲ್ಲಿಯೇ ಕರ್ನಾಟಕದ ಹಲವು ಕಡೆಗಳಲ್ಲಿ ಲಘು ಮಳೆಯಾಗುತ್ತಿದೆ.
ಬಿಸಿಲು ನಾಡಲ್ಲಿ ಮಳೆಯ ಸಿಂಚನ
ರಾಜ್ಯದ ಹಲವು ಕಡೆಗಳಲ್ಲಿ ಮಳೆ ಮನ್ಸೂಚನೆ ಕಂಡು ಬರುತ್ತಿದ್ದರೆ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಕೂಡ ಆಗುತ್ತಿದೆ. ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳ ಹಲವು ಕಡೆ ಮಳೆಯಾಗಿದೆ. ಬಳಿಕ ಬಿಸಿಲು ನಾಡು ಎಂದೇ ಕುಖ್ಯಾತವಾಗಿರುವ ಅಧಿಕ ತಾಪಮಾನದ ಜಿಲ್ಲೆಗಳಾದ ಬೀದರ್, ಕಲಬುರಗಿ ಜಿಲ್ಲೆಗಳಲ್ಲೂ ಲಘು ಮಳೆಯಾಗಿದೆ.
ಮಾರ್ಚ್ 16ರಂದು ಕಲಬುರಗಿ ನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಸಂಜೆ ಕಲಬುರಗಿ ನಗರದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಕೆಲವು ಕಡೆ 10 ನಿಮಿಷಗಳ ಸಾಧಾರಣ ಮಳೆಯಾಗಿದೆ. ಮಾರ್ಚ್ 17ರಂದು ಬೀದರ್’ನಲ್ಲೂ ಮಳೆಯಾಗಿದೆ. ಹೀಗೆ ಹಲವು ಕಡೆ ಸಾಧಾರಣ ಮಳೆಯಾಗುತ್ತಿರುವುದು ಉತ್ತಮ ಮುಂಗಾರು ಆಗಮನದ ಮುನ್ಸೂಚನೆ ಎನ್ನಲಾಗುತ್ತಿದೆ.
ಇದನ್ನೂ ಓದಿ: BPNL Recruitment 2024 : SSLC, PUC ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳ ಬೃಹತ್ ನೇಮಕಾತಿ : ವೇತನ ₹43,500
ಎಲ್ಲೆಲ್ಲಿ ಮಳೆ ಸಿಂಚನ?
ಕಳೆದ ವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ದರ್ಶನ ನೀಡಿದೆ. ಮಾರ್ಚ್ 13ರಿಂದ ರಾಜ್ಯದಲ್ಲಿ ಮಳೆ ಸಿಂಚನವಾಗುತ್ತಿದ್ದು; ನಿನ್ನೆ ಮಾರ್ಚ್ 17ರಂದು ಅಧಿಕ ಉಷ್ಣಾಂಶ ಹೊಂದಿದ್ದ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಕೂಡ ಮಳೆಯಾಗುವ ಮೂಲಕ ಹೊಸ ಭರವಸೆ ಹುಟ್ಟು ಹಾಕಿದೆ.
- ಮಾರ್ಚ್ 13 : ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಿಗ್ಗಾಲು, ಸೋಮವಾರಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿತ್ತು.
- ಮಾರ್ಚ್ 14 : ಚಿಕ್ಕಮಗಳೂರು ತಾಲ್ಲೂಕಿನ ಕೊಳಗಾವೆ ಗ್ರಾಮದಲ್ಲಿ ಉತ್ತಮ ಮಳೆಯಾಗಿತ್ತು.
- ಮಾರ್ಚ್ 15 : ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲರೆಯಲ್ಲಿ 27 ಮಿಮೀ ಮಳೆಯಾಗಿತ್ತು. ಹೆಗ್ಗಡಹಳ್ಳಿ 9.5 ಮಿಮೀ, ಹಾಡ್ಯ 3.5 ಮಿಮೀ, ಕಲ್ಲಂಬಾಳು 3.5 ಮಿಮೀ ಮಳೆ ಸುರಿದಿತ್ತು.
- ಮಾರ್ಚ್ 16 : ಕಲಬುರಗಿಯಲ್ಲಿ 10 ನಿಮಿಷಗಳ ಕಾಲ ಲಘುವಾಗಿ ಮಳೆಯಾಗಿದೆ.
- ಮಾರ್ಚ್ 17 : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಆಲ್ಲೂರು ಸಮೀಪದ ಕಣತಿ, ಜೇನುಗದ್ದೆ, ಹುಣಸೆಹಳ್ಳಿ ಭಾಗದಲ್ಲಿ ಮತ್ತೆ ಮಳೆಯಾಗಿದೆ. ಬೀದರ್ ಜಿಲ್ಲೆಯ ಬೀದರ್ ನಗರ, ಔರಾದ್, ಕಮಲನಗರ ಸೇರಿ ವಿವಿಧೆಡೆ ಬಿರುಗಾಳಿ ಮಿಶ್ರಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ
ಮಾರ್ಚ್ 20ರ ನಂತರ ಭರ್ಜರಿ ಮಳೆ
ಈ ವರ್ಷ ಉತ್ತಮ ಮುಂಗಾರು ಮಳೆ ನಿರೀಕ್ಷೆ ಇದ್ದು; ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಖಚಿತ ಮಳೆ ಮಾಹಿತಿ ನೀಡಿದೆ. ಜೂನ್’ನಿಂದ ಆರಂಭವಾಗುವ ಮುಂಗಾರು ಮಳೆ ದೇಶದಾದ್ಯಂತ ಉತ್ತಮ ರೀತಿಯಲ್ಲಿ ಸುರಿಯಲಿದೆ. ಮಳೆ ಕೊರತೆಗೆ ಕಾರಣವಾಗಿದ್ದ ಎಲ್ ನಿನೋ ಮತ್ತು ಲಾ ನಿನಾ ಪರಿಸ್ಥಿತಿಗಳ ಪ್ರಭಾವ ಪೆಸಿಫಿಕ್ ಮಹಾಸಾಗರದಲ್ಲಿ ಮೇ ತಿಂಗಳ ಬಳಿಕ ಕಡಿಮೆಯಾಗಲಿದೆ ಎಂದು ಐಎಂಡಿ ಪ್ರಕಟಿಸಿದೆ.
ಸದ್ಯಕ್ಕೆ ಕಳೆದ ವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರ ಮಳೆ ಹನಿಯತೊಡಗಿದ್ದು; ಮಾರ್ಚ್ 20ರ ಬಳಿಕ ಮತ್ತಷ್ಟು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮಾರ್ಚ್ ಕೊನೆಯ ಹೊತ್ತಿಗೆ ಮತ್ತು ಉಗಾದಿ ಹಬ್ಬದ ಸಂದರ್ಭದಲ್ಲಿ ಉತ್ತಮ ಮಳೆ ಬೀಳುವ ಅಂದಾಜಿದೆ. ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ ಏಪ್ರಿಲ್ ಎರಡನೇ ವಾರ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: krushi bhagya scheme 2024 : ಕೃಷಿಭಾಗ್ಯ ಯೋಜನೆ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ…